ಭಟ್ಕಳ, ಡಿಸೆಂಬರ್ 4: ಬ್ರಿಟಿಷರ ವಿರುದ್ಧ ಸೆಣೆಸಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನನ (ಕ್ರಿಶ ೧೭೮೨-೧೭೯೯) ಕುಡಿ ಇಪ್ಪತ್ತು ವರ್ಷ ವಯಸ್ಸಿನ ಎಸ್.ಎಮ್.ಇಸ್ಮೈಲ್ ಶಾ ಶುಕ್ರವಾರ ಭಟ್ಕಳಕ್ಕೆ ಭೇಟಿ ನೀಡಿದರು.

ಇಲ್ಲಿಯ ಟಿಪ್ಪುಸುಲ್ತಾನ್ ಕೊಡುಗೆಯಾದ ಸುಲ್ತಾನ್ ಸ್ಟ್ರೀಟ್, ಸುಲ್ತಾನ್ ಮಸೀದಿ, ಮುಸ್ಬಾ ಸ್ಟ್ರೀಟ್ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ಈತ ಅಜ್ಜನ ಹಿರಿಮೆಯನ್ನು ಕಣ್ಣಲ್ಲಿ ತುಂಬಿಕೊಂಡು ಕೆಲವು ಕ್ಷಣ ಭಾವುಕನಾದ. ಟಿಪ್ಪು ಸುಲ್ತಾನ್ ಬಗ್ಗೆ ಇಲ್ಲಿಯ ಜನರು ಬಹಳಷ್ಟು ವಿಷಯಗಳನ್ನು ಅರಹುತ್ತಿದ್ದಂತೆಯೇ ಸಂತೋಷಗೊಂಡ ಇಸ್ಮೈಲ್, ಇಲ್ಲಿಯ ಸುಲ್ತಾನ್ ಮಸೀದಿ ಹಾಗೂ ಜಾಮೀಯಾ ಮಸೀದಿಗಳಲ್ಲಿ ಜನರೊಂದಿಗೆ ಸೇರಿಕೊಂಡು ಪ್ರಾರ್ಥನೆ ಸಲ್ಲಿಸಿದ. ಧಾರ್ಮಿಕ ಮುಖಂಡರುಗಳೊಂದಿಗೆ ಕೆಲ ಕಾಲ ಅಜ್ಜನ ಕುರಿತು ಚರ್ಚೆ ನಡೆಸಿದ. ಶುಕ್ರವಾರ ಸಂಜೆಯೇ ಆತ ಭಟ್ಕಳದಿಂದ ವಾಪಸ್ಸಾಗುತ್ತಿದ್ದಾನೆ.

ರಾಜನ ಮೊಮ್ಮಗನಿಗೆ ಸೈಕಲ್ಲೇ ಗತಿ:
ಟಿಪ್ಪು ಸುಲ್ತಾನನ ನಾಲ್ವರು ಹೆಂಡಿರ ೧೬ ಗಂಡು ಮಕ್ಕಳಲ್ಲಿ ಮೂರನೇಯವನಾದ ಶಾಜಾದ್ ಮುಹಿ-ಉದ್ದೀನ್ ಸುಲ್ತಾನ್ ಸಾಹೇಬ್ನ ನಂತರದ ಏಳನೇ ತಲೆ ಮಾರಿನವನಾದ ಈತನ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಬ್ರಿಟೀಷರ ಅಣತಿಯಂತೆ ಕೋಲ್ಕತ್ತಾಕ್ಕೆ ವಲಸೆ ಹೋಗಿದ್ದ ಟಿಪ್ಪು ಸುಲ್ತಾನ್ ಕುಟುಂಬ ಅಲ್ಲಿಯೇ ವಾಸವನ್ನು ಮುಂದುವರೆಸಿದ್ದು, ಅಲ್ಲಿಯ ಅಶುತೋಷ್ ಕಾಲೇಜಿನಲ್ಲಿ ಈತ ದ್ವಿತೀಯ ಬಿ.ಕಾಮ್ ಓದುತ್ತಿದ್ದಾನೆ. ಆತ ಹೇಳುವ ಪ್ರಕಾರ ಸೈಕಲ್ಲಿನಲ್ಲಿಯೇ ಕಾಲೇಜಿಗೆ ಪಯಣ. ತಂದೆ ರಾಯಿಸ್ ಅಹ್ಮದ್ ಶಾ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರೆ, ಬದುಕಿನ ಬಣ್ಣ ಸಂಪೂರ್ಣ ಮಾಯವಾಗಿ ಅಲ್ಲಲ್ಲಿ ಕಲೆಯನ್ನಷ್ಟೇ ಉಳಿಸಿ ಹೋಗುವ ಹಂತ ತಲುಪಿದೆ. ಕುಟುಂಬದ ಉಳಿದ ಸದಸ್ಯರ ಸ್ಥಿತಿ ಇದಕ್ಕಿಂತ ಯಥೇಚ್ಛ ಭಿನ್ನವಾಗಿಯೇನೂ ಇಲ್ಲ. ಎಲ್ಎಲ್ಬಿ ಓದಿ ಕಾನೂನು ಪಂಡಿತನಾಗುವ ಆಸೆಯನ್ನು ಹೊಂದಿರುವ ಯುವಕ ಇಸ್ಮೈಲ್ನಿಗೆ ಕರ್ನಾಟಕದ ಬಗೆಗೆ ಅದೆಂತಹುದ್ದೋ ಹುಚ್ಚು ಪ್ರೀತಿ! ಮನೆ ಮಂದಿಯನ್ನು ಕರ್ನಾಟಕಕ್ಕೆ ಕರೆದುಕೊಂಡು ಬಂದು ಅಜ್ಜ ನಡೆದಾಡಿದ ಜಾಗವನ್ನೆಲ್ಲ ತೋರಿಸಬೇಕು ಎಂಬ ಹಂಬಲ. ಅದಕ್ಕಾಗಿ ಆತ ನೋಡುತ್ತಿರುವುದು ಸರಕಾರದ ಕಡೆಗೆ...
ಸರಕಾರ ನಮಗೆ ಏನೂ ಕೊಡಲಿಲ್ಲ: ಬ್ರಿಟೀಷರೊಂದಿಗೆ ಸೇರಿಕೊಂಡು ಮಸಲತ್ತು ನಡೆಸಿದ ಹೈದರಾಬಾದಿನ ನವಾಬನ ಕುಟುಂಬ, ಅವರು-ಇವರು ಎಲ್ಲರೂ ಸರಕಾರಗಳಿಂದ ಏನೋನೋ ಪಡೆದುಕೊಂಡರು. ಮನೆ ಸಿಕ್ಕಿದೆ. ಅಂತಸ್ತೂ ಸಿಕ್ಕಿದೆ. ಆದರೆ ನಾಡಿಗಾಗಿ ಬ್ರಿಟಿಷರೊಂದಿಗೆ ಸೆಣೆಸಾಡಿದ ಟಿಪ್ಪುಸುಲ್ತಾನನ ವಂಶಸ್ಥರಾದ ನಮಗೆ ಮಾತ್ರ ಏನೂ ಸಿಗಲಿಲ್ಲ. ನಾವೇ ಉಳಿದು ಕೊಂಡಿದ್ದ ಕರ್ನಾಟಕ ಮಾತ್ರ ಇನ್ನೂ ನಮಗೆ ಅಸ್ಪೃಶ್ಯ ಎಂದು ಇಸ್ಮೈಲ್ ಹೇಳಿದ್ದಾನೆ. ಇದೀಗ ಕೆಲವರು ನಮಗಾಗಿ ಸಹಾಯ ಒದಗಿಸುವ ಭರವಸೆ ನೀಡಿದ್ದು, ಸರಕಾರವೂ ಆ ದಿಶೆಯಲ್ಲಿ ನೆರವಾಗುವ ವಿಶ್ವಾಸವನ್ನು ಆತ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾನೆ.
ವರದಿ: ವಸಂತ ದೇವಾಡಿಗ